ಸಚಿವ ಮಧು ಬಂಗಾರಪ್ಪ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ : ಸಂಸ್ಥೆಯ ಕಾರ್ಯದ ಬಗ್ಗೆ ಮೆಚ್ಚುಗೆ
ಕುಮಟಾ : ತಾಲೂಕು ಹಾಗೂ ಸುತ್ತಮುತ್ತಲ ತಾಲೂಕಿನಲ್ಲಿ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಸರಸ್ವತಿ ಪಿಯು ಕಾಲೇಜಿನ ಐದು ವರ್ಷದ ಸಾಧನೆಯನ್ನು ಗಮನಿಸಿದ್ದೇನೆ ನಿರಂತರವಾಗಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿಕೊಂಡು ಬಂದಿರುವ ಸಂಸ್ಥೆಯ ಕಾರ್ಯ ಮೆಚ್ಚುವಂತಹದ್ದು ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿದ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಹಾಗೂ ವಿಧಾತ್ರಿ ಅಕಾಡೆಮಿಯ ಸಹಯೋಗದಲ್ಲಿ ನಡೆಯುತ್ತಿರುವ ಸರಸ್ವತಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಯಾವುದೇ ಒಂದು ಸಂಸ್ಥೆಯ ನಿರಂತರವಾಗಿ ಸಾಧನೆ ಮಾಡಿಕೊಂಡು ಬಂದಿದೆ ಎಂದಾದಲ್ಲಿ ಆ ಸಂಸ್ಥೆಯಲ್ಲಿ ಆಡಳಿತ ಮಂಡಳಿ ಉಪನ್ಯಾಸಕರು ತಮ್ಮ ಸಂಪೂರ್ಣ ಶ್ರಮ ವಹಿಸುತ್ತಿದ್ದಾರೆ ಎಂದೇ ಅರ್ಥ. ಅನುದಾನರಹಿತ ಕೊಂಕಣ ಪಿಯು ಕಾಲೇಜ್ ಕಳೆದ ಐದು ವರ್ಷಗಳಿಂದ ನಿರಂತರ ಪ್ರತೀಶತ ೧೦೦ ರಷ್ಟು ಫಲಿತಾಂಶವನ್ನು ದಾಖಲಿಸುತ್ತಿದೆ. ವಿದ್ಯಾರ್ಥಿಗಳ ಸಾಧನೆ ಹಾಗು ಸಂಸ್ಥೆಯ ಬೆಂಬಲ ಪ್ರೋತ್ಸಾಹ ಸಾಧನೆಗೆ ಪ್ರಮುಖ ಕಾರಣವಾಗಿದೆ ಎಂಬುದನ್ನು ಮನಗಂಡದ್ದೇನೆ. ಮುಂದಿನ ದಿನಗಳಲ್ಲಿ ಇನ್ನೊಮ್ಮೆ ಈ ಸಂಸ್ಥೆಗೆ ಭೇಟಿ ನೀಡುತ್ತೇನೆ ಎಂದು ಮಧು ಭರವಸೆ ನೀಡಿದರು.
ಶಿಕ್ಷಣದಿಂದ ಮಾತ್ರ ದೇಶ ಮುನ್ನಡೆಸಲು ಸಾಧ್ಯ. ಹೀಗಾಗಿ ಶಿಕ್ಷಣದಲ್ಲಿ ಹೊಸ ಕ್ರಾಂತಿ ಹುಟ್ಟುಹಾಕಲಾಗಿದೆ. ವೆಬ್ಕಾಸ್ಟಿಂಗ್ ಮೂಲಕ ಜಿಲ್ಲೆಗಳಿಗೆ ರ್ಯಾಂಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ರ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲಾಗಿದೆ ಎಂದರು.
ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆದು ಹೆಚ್ಚಿನ ಅಂಕ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಈ ರೀತಿಯಾಗಿ ಒಂದು ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ಬರೆಯಬಹುದು. ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಗುಣಗಳಿರುತ್ತವೆ. ಕೆಲವು ಲೋಪಗಳಿಂದ ಅದು ಕೈತಪ್ಪಿಹೋಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಈ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ವಿನೂತನ ಪರೀಕ್ಷಾ ಪದ್ದತಿಯನ್ನು ಜಾರಿಗೊಳಿಸಿದ್ದೇವೆ. ಇದರಿಂದ ಎಲ್ಲ ಸ್ತರದ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ೭೯ ಸಾವಿರ ವಿದ್ಯಾರ್ಥಿಗಳು ಎರಡು ಬಾರಿ ಪರೀಕ್ಷೆ ಬರೆದು ಯಶಸ್ಸು ಕಂಡಿದ್ದಾರೆ.
ಕೌಟುಂಬಿಕ ಸಮಸ್ಯೆಗಳಿಂದ ಹಾಗು ಬಡತನದಿಂದ ವಿದ್ಯಾರ್ಥಿಗಳು ಆಹಾರದ ಕೊರತೆ ಅನುಭವಿಸಿ, ಶಾರೀರಿಕ ಕ್ಷಮತೆ ಕಳೆದುಕೊಳ್ಳಬಾರದೆಂಬ ಕಾರಣಕ್ಕೆ ಸರ್ಕಾರ ಹಾಲು, ಮೊಟ್ಟೆ ಹಾಗು ಇನ್ನಿತರ ಪೌಷ್ಠಿಕ ಆಹಾರಗಳನ್ನು ನೀಡುತ್ತಿದೆ. ಶಿಕ್ಷಣ ಇಲಾಖೆಯನ್ನು ಸದೃಢಗೊಳಿಸಲು ಮುಖ್ಯಮಂತ್ರಿಗಳ ನಿರ್ದೇಶನದಂತೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳೊಳಿಸಿರುವುದಾಗಿ ಮಧು ಬಂಗಾರಪ್ಪ ಹೇಳಿದರು.
ದ್ವಿತೀಯ ಪಿ.ಯು ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ೭ ಅಂಕ ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿ ೫ನೇ ಸ್ಥಾನ ಪಡೆದ ಸಾಗರ ನಾಯ್ಕ ಹಾಗು ವಿಜ್ಞಾನ ವಿಭಾಗದಲ್ಲಿ ೫೯೪ ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ೬ನೇ ಸ್ಥಾನ ಪಡೆದ ಅನನ್ಯಾ ಭಾಗ್ವತ್ ಅವರನ್ನು ಸಚಿವ ಮಧು ಬಂಗಾರಪ್ಪ ಪುರಸ್ಕರಿಸಿ, ಮುಂದಿನ ಶಿಕ್ಷಣಕ್ಕೆ ಶುಭಹಾರೈಸಿದರು.
ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಗೌರವ ಕಾರ್ಯದರ್ಶಿ ಮುರಳೀಧರ ಪ್ರಭು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಭೀಮಣ್ಣ ನಾಯ್ಕ, ಟ್ರಸ್ಟಿನ ಅಧ್ಯಕ್ಷ ವಿ.ಆರ್.ನಾಯಕ, ಜಂಟಿ ಕಾರ್ಯದರ್ಶಿ ಶೇಷಗಿರಿ ಶಾನಭಾಗ, ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ಇದ್ದರು. ಶಿಕ್ಷಕ ಚಿದಾನಂದ ಭಂಡಾರಿ ನಿರೂಪಿಸಿದರು. ಪ್ರಾಚಾರ್ಯ ಕಿರಣ ಭಟ್ಟ ವಂದಿಸಿದರು.